ಕರ್ನಾಟಕದ ವಿಧಾನಸಭಾ ಚುನಾವಣೆಗಳು ಘೋಷಣೆಯಾದ ತಕ್ಷಣ ಬಂದ ಬೌದ್ಧಿಕ ಜಗತ್ತಿನ ಪ್ರತಿಕ್ರಿಯೆಗಳಲ್ಲಿ ಮೊದಲನೆಯದ್ದು ಮತ್ತು ಬಹಳ ಮುಖ್ಯವಾದುದು ಡಾ.ಯು.ಆರ್. ಅನಂತಮೂರ್ತಿಯವರದ್ದು. `ಯಾರು ಬಂದರೇನು? ಎಲ್ಲರೂ ಭ್ರಷ್ಟರೇ...' ಎಂಬ ಸಿನಿಕ ಪ್ರತಿಕ್ರಿಯೆಯ ಬದಲಿಗೆ ಅವರು ರಚನಾತ್ಮಕವಾದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಹನ್ನೊಂದು ಅಂಶಗಳ ಜನತಾ ಪ್ರಣಾಳಿಕೆಯೊಂದರ ಕರಡನ್ನು ಬಿಡುಗಡೆ ಮಾಡಿ ಇದಕ್ಕೆ ಇನ್ನಷ್ಟು ಅಂಶಗಳನ್ನು ಸೇರಿಸಿ ಪೂರ್ಣಗೊಳಿಸೋಣ ಎಂದರು. ಈ ಪ್ರಣಾಳಿಕೆಗೆ ಬಂದ ಪ್ರತಿಕ್ರಿಯೆಗಳು ಬಹಳ ಕುತೂಹಲಕಾರಿ. ರಾಜಕೀಯ ಪಕ್ಷಗಳಿಗೆಲ್ಲಾ ಒಂದೊಂದು ಪ್ರಣಾಳಿಕೆಯಿದ್ದಂತೆ ಜನತೆಗೂ ಒಂದು ಪ್ರಣಾಳಿಕೆ ಇರುತ್ತದೆ ಎಂಬುದನ್ನು ಹೇಳಿದ ಅನಂತಮೂತಿರ್ಯವರ ನಿಲುವನ್ನು ಹಲವರು ಶ್ಲಾಘಿಸಿದರು. ವಿವಿಧ ಚಳವಳಿಗಳಲ್ಲಿ ತೊಡಗಿಕೊಂಡಿರುವ ಹಲವರು, ರಾಜಕಾರಣ ಪರಿಶುದ್ಧವಾಗಿರಬೇಕೆಂದು ಬಯಸುವವರು ಅನಂತಮೂರ್ತಿಯವರು ಮಂಡಿಸಿದ ಹನ್ನೊಂದು ಸೂತ್ರಗಳಿಗೆ ಪೂರಕವಾಗಿ ಒಂದಷ್ಟು ಅಂಶಗಳನ್ನು ಸೇರಿಸಿದರು.
ಇನ್ನೊಂದು ವರ್ಗ ಅನಂತಮೂರ್ತಿಯವರನ್ನು ಮನಸೋ ಇಚ್ಛೆ ಹಳಿಯಲಾರಂಭಿಸಿತು. ಅದು ಈಗಲೂ ಮುಂದುವರಿದಿದೆ. ಹೀಗೆ ಬೈಯುವವರಲ್ಲಿ ಎರಡು ಬಗೆ. ಒಂದು ವರ್ಗದವರು ಅನಂತಮೂತಿರ್ಯವರು ಏನು ಮಾಡಿದರೂ ಅದನ್ನು ಟೀಕಿಸಬೇಕೆಂದು ಪಣ ತೊಟ್ಟವರು. ಮತ್ತೊಂದು ವರ್ಗದವರಿಗೆ ಈ ಬಗೆಯ ಹಟವೇನೂ ಇಲ್ಲ. ಅವರ ದೃಷ್ಟಿಯಲ್ಲಿ ರಾಜಕಾರಣ ಎಂಬುದು ಜ್ಞಾನಪೀಠ ಪುರಸ್ಕೃತರಿಗೆ ಹೇಳಿಕೊಳ್ಳುವಂಥದ್ದಲ್ಲ. ಅದು ಕೊಳಕು ರಾಡಿ. ಅದರ ಆಗುಹೋಗುಗಳಿಗೆ ಸಾಹಿತಿಯೊಬ್ಬ ಪ್ರತಿಕ್ರಿಯಿಸುವುದು ಆತನ ವ್ಯಕ್ತಿತ್ವಕ್ಕೆ ಶೋಭಿಸುವುದಿಲ್ಲ.
ಈ ಎರಡೂ ಗುಂಪಿಗೆ ಸೇರದ ಮತ್ತೊಂದು ವರ್ಗವಿದೆ. ಇದನ್ನು ಸಿನಿಕರ ಬಳಗ ಎಂದು ಗುರುತಿಸಬಹುದೇನೋ. ಈ ಸಿನಿಕರ ಬಳಗ ಅನಂತಮೂರ್ತಿಯವರು ಜನರೆದುರು ಇಟ್ಟ ಕರಡು ಪ್ರಣಾಳಿಕೆಯ ಹನ್ನೊಂದು ಅಂಶಗಳಲ್ಲಿ `ಮೀಸಲಾತಿ ಪಡೆದವರಿಗೆ ಮತ್ತೆ ಮೀಸಲಾತಿ ಬೇಡ' ಎಂಬ ಅಂಶವೊಂದನ್ನುಳಿದು ಉಳಿದೆಲ್ಲವೂ ಅಪ್ರಾಯೋಗಿಕ. ಅತಿ ಆದರ್ಶದ ಮಾತುಗಳು ಎಂದು ನಿರಾಕರಿಸಿಬಿಟ್ಟಿತು.
* * *
ಅನಂತಮೂರ್ತಿಯವರ ಪ್ರಣಾಳಿಕೆಯ ಹನ್ನೊಂದು ಅಂಶಗಳು ಈ ಕೆಳಗಿನಂತೆ ಸಂಕ್ಷೇಪಿಸಬಹುದು.
1.ಅದಿರನ್ನು ಮಾರುವ ಗಣಿಗಾರಿಕೆ ನಿಲ್ಲಬೇಕು.
2.ಎಲ್ಲ ಮಕ್ಕಳಿಗೂ ಹತ್ತನೇ ತರಗತಿಯ ತನಕವಾದರೂ ಉತ್ಕೃಷ್ಟ ಗುಣಮಟ್ಟದ ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಣ ದೊರೆಯಬೇಕು.
3.ನಮ್ಮ ನಗರಗಳು ಬೆಳೆಯುವಾಗ ಅವು ವೃದ್ಧರಿಗೂ ಅಂಗವಿಕಲರಿಗೂ ಮಕ್ಕಳಿಗೂ ಅಹ್ಲಾದಕರವಾಗಿರಬೇಕು. ಎಲ್ಲೆಲ್ಲೂ ಸಾರ್ವಜನಿಕ ಉದ್ಯಾನವನಗಳು. ಗ್ರಂಥಾಲಯಗಳು, ರಸ್ತೆಗಳನ್ನು ದಾಟಲು ಮುಕ್ತ ಅವಕಾಶ, ಸೈಕಲ್ನಲ್ಲಿ ಓಡಾಡುವವರಿಗೆ ಅವರದೇ ಮಾರ್ಗಗಳು ಬೇಕು.
4.ಬಡಪಾಯಿಗಳಾದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸಗಳನ್ನು ಪಡೆಯುವುದಕ್ಕೆ ಅಗತ್ಯವಾದ ಶಿಕ್ಷಣ ಮತ್ತು ಮೀಸಲಾತಿ ಬೇಕು.
5.ಈಗಾಗಲೇ ಮೀಸಲಾತಿ ಪಡೆದವರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಬೇಡ. ಬದಲಿಗೆ ಆ ವರ್ಗಗಳಲ್ಲಿ ಈವರೆಗೂ ಏನೂ ಸಿಗದವರಿಗೆ ಈ ಸವಲತ್ತು ದೊರೆಯಬೇಕು.
6.ವೋಟುಗಳಿಸಲು ಕೋಮು, ಭಾಷೆ, ಜಾತಿಗಳ ನಡುವೆ ವೈಷಮ್ಯವನ್ನು ಬೆಳೆಸುವ ಮಾಧ್ಯಮಗಳ ಲಾಭಕೋರತನದ ಹವಣಿಕೆಗಳಿಗೂ ರಾಜಕಾರಣಿಗಳ ಪ್ರಚಾರಗಳಿಗೂ ನಿರ್ಬಂಧಗಳಿರಬೇಕು.
7.ಕೃಷಿಯೋಗ್ಯ ಭೂಮಿಯನ್ನು ವಿಶೇಷ ಆರ್ಥಿಕ ವಲಯಗಳಿಗಾಗಿ ವಶಪಡಿಸಿಕೊಳ್ಳಬಾರದು.
8.ರೈತರ ಬೆಳೆಗೆ ಯೋಗ್ಯ ಬೆಲೆ ದೊರೆಯಬೇಕು.
9.ದೊಡ್ಡ ಮಾಲ್ಗಳ ಬದಲಿಗೆ ಹಲವು ವ್ಯಾಪಾರಿಗಳು ನಡೆಸುವ ಕಿರಾಣಿ ಅಂಗಡಿಗಳಿಗೆ ಪ್ರೋತ್ಸಾಹ ದೊರೆಯಬೇಕು.
10.ಭೂಮಿಯ ತಾಪವನ್ನು ಹೆಚ್ಚಿಸುವ ಸಕಲ ಜೀವಿಗಳಿಗೆ ಮೃತ್ಯು ಪ್ರಾಯವಾದ ಅಮೆರಿಕಾ ಮಾದರಿಯ ಅಭಿವೃದ್ಧಿಗೆ ಬದಲಾಗಿ ಸರ್ವೋದಯದ ಪ್ರಗತಿ ನಮ್ಮ ಎಲ್ಲ ಕ್ರಿಯೆಗಳಲ್ಲಿ ವ್ಯಕ್ತವಾಗಬೇಕು.
11.ಸಾವಯವ ಕೃಷಿಗೂ, ಸೂರ್ಯಶಾಖದಿಂದ ಉತ್ಪಾದಿಸುವ ವಿದ್ಯುತ್ತಿಗೂ ಜಲಸಂರಕ್ಷಣೆಗೂ ಅಗತ್ಯವಾದ ಸಂಶೋಧನೆಗಳಿಗೆ ವಿಜ್ಞಾನ ಲೋಕದಲ್ಲಿ ಆದ್ಯಂತೆ ಇರುವಂತೆ ನೋಡಿಕೊಳ್ಳಬೇಕು.
ಈ ಪ್ರಣಾಳಿಕೆಗೆ ಪ್ರತಿಕ್ರಿಯಿಸಿದ ಸಿನಿಕರ ಬಳಗದ ಪ್ರತಿನಿಧಿಯೊಬ್ಬರು `ಸಾಮಾನ್ಯ ಶಾಲೆಗಳು, ಉದ್ಯಾನವನಗಳಿರುವ ನಗರಗಳು, ಪ್ರತ್ಯೇಕ ಸೈಕಲ್ ಲೇನ್ಗಳೆಲ್ಲಾ ಅಮೆರಿಕಾದಲ್ಲಿವೆ. ಕರ್ನಾಟಕದ ಎಲ್ಲರಿಗೂ ಅಮೆರಿಕಾಕ್ಕೆ ವಿಸಾ ಕೊಟ್ಟರೆ ಸಮಸ್ಯೆ ಪೂರ್ಣ ಪರಿಹಾರ!' ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು. ಈ ಸಿನಿಕ ಪ್ರತಿಕ್ರಿಯೆ ಕೂಡಾ ಜನತಾ ಪ್ರಣಾಳಿಕೆಯ ಪ್ರಾಯೋಗಿಕತೆಯನ್ನು ಹೇಳುತ್ತಿದೆ ಎಂಬುದೇ ಇಲ್ಲಿನ ತಮಾಷೆ. ಆಧುನಿಕ ಅಭಿವೃದ್ಧಿಯ ಪ್ರವಾದಿಗಳಿಗೆಲ್ಲಾ ಬಹುದೊಡ್ಡ ಮಾದರಿ ಅಮೆರಿಕ. ಅಲ್ಲಿನ ಸಾಮಾನ್ಯ ಶಾಲೆಗಳೂ ಮಕ್ಕಳಿಗೂ ಮುದುಕರಿಗೂ ಅಂಗವಿಕಲರಿಗೂ ಸಹ್ಯವಾದ ನಗರಗಳೇಕೆ ನಮಗೆ ಮಾದರಿಯಾಗುತ್ತಿಲ್ಲ?
* * *
ಕರ್ನಾಟಕದ ರಾಜಕಾರಣ ಕೋಮು ಉನ್ಮಾದ, ಅಧಿಕಾರ ಲಾಲಸೆ, ಜಾತಿ ಜಗಳಗಳ ಆಡೊಂಬಲವಾಗಿರುವುದರಿಂದ ಬೇಸರಗೊಂಡು ಸಿನಿಕರ ಬಳಗದ ಸದಸ್ಯರಾಗಬಹುದಾಗಿದ್ದವರು ರವಿ ಕೃಷ್ಣಾ ರೆಡ್ಡಿ. ಮೂವತ್ಮೂರು ವರ್ಷ ವಯಸ್ಸಿನ ಇವರು ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅಮರಿಕದಲ್ಲಿ ಕೈತುಂಬಾ ಸಂಬಳ ತರುವ ಕೆಲಸವೂ ಇದೆ. ಕನ್ನಡ ಮತ್ತು ಇಂಗ್ಲಿಷ್ಗಳೆರಡರಲ್ಲೂ ಚೆನ್ನಾಗಿ ಬರೆಯುವ ಕೌಶಲ್ಯವೂ ಇದೆ. ಹಾಗಾಗಿ ಸಿನಿಕ ಅಭಿಪ್ರಾಯಗಳನ್ನು ಪ್ರಚುರ ಪಡಿಸುವುದೂ ಇವರಿಗೆ ಬಹಳ ಸುಲಭ. ಈ ಸುಲಭದ ಹಾದಿಯನ್ನು ಬಿಟ್ಟು ಅವರು ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯ ಮತ್ತು ನೈತಿಕತೆಗಳಿಗೆ ಆಗ್ರಹಿಸಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಸಿನಿಕರ ಬಳಗದ ದೃಷ್ಟಿಯಲ್ಲಿ ಇದೂ ಅಪ್ರಾಯೋಗಿಕ. ಏಕೆಂದರೆ ರವಿ ಗೆಲ್ಲುವ ಸಾಧ್ಯತೆ ಇಲ್ಲ. ಮೌಲ್ಯಗಳಿಗಾಗಿ ಆಗ್ರಹಿಸಿ ಉಪವಾಸ ಮಾಡಿದರೆ ಯಾರು ಕೇಳುತ್ತಾರೆ? ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
* * *
ಸಮಾನತೆ, ಪರಿಸರ ಅಭಿವೃದ್ಧಿ, ನೈತಿಕತೆ ಮುಂತಾದುವುಗಳೆಲ್ಲಾ ಅಪ್ರಾಯೋಗಿಕ ಎಂದರೆ ಪ್ರಾಯೋಗಿಕವಾದುದೇನು?
ಸುಳ್ಳು ಭರವಸೆಗಳನ್ನು ನೀಡುವುದು, ಓಟಿಗಾಗಿ ಲಂಚ ಪಡೆದು ಗೆದ್ದ ನಂತರ ಅದನ್ನು ಮರಳಿ ಗಳಿಸುವುದು, ಕೋಮು ದ್ವೇಷವನ್ನು ಹುಟ್ಟು ಹಾಕುವುದು, ಅಕ್ರಮವಾಗಿ ಆಸ್ತಿ ಸಂಪಾದಿಸುವುದು, ದೇಶದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿ ಗಣಿಗಾರಿಕೆ ನಡೆಸುವುದು, ದೊಡ್ಡ ಕಾರುಗಳು ವೇಗವಾಗಿ ಚಲಿಸಲು ಸಾಧ್ಯವಿರುವ ದೊಡ್ಡ ರಸ್ತೆಗಳನ್ನು ನಿರ್ಮಿಸುವುದು, ಸರಕಾರೀ ಶಾಲೆಗಳನ್ನು ದೊಡ್ಡಿಗಳನ್ನಾಗಿಸುವುದು ಮುಂತಾದುವುಗಳೆಲ್ಲಾ ಪ್ರಾಯೋಗಿಕವಾದ ಕ್ರಿಯೆಗಳು ಎನ್ನಬಹುದೇ?
ಅಭಿಪ್ರಾಯ ರೂಪಿಸುವ ಸ್ಥಾನದಲ್ಲಿ ನಿಂತಿದ್ದೇನೆಂದು ಭಾವಿಸುವ ಸಿನಿಕರ ಬಳಗ ಇವೆಲ್ಲವೂ ಪ್ರಾಯೋಗಿಕವೇ ಸರಿ ಎಂಬ ಸಿನಿಕ ವಾದವನ್ನು ಮಂಡಿಸಿದರೂ ಆಶ್ಚರ್ಯವಿಲ್ಲ. ಆದರೆ ವಾಸ್ತವ ಇಷ್ಟೊಂದು ನಿರಾಶಾದಾಯಕವಾಗಿಲ್ಲ. ಅನಂತಮೂರ್ತಿ ಮತ್ತು ರವಿ ಕೃಷ್ಣಾ ರೆಡ್ಡಿಯವರ ವೈಯಕ್ತಿಕ ಮಟ್ಟದ ಪ್ರತಿಕ್ರಿಯೆಗಳಿಗಿಂತ ಭಿನ್ನವಾದ ಸಾಮುದಾಯಿಕ ಪ್ರತಿಕ್ರಿಯೆಯೊಂದೂ ರೂಪುಗೊಂಡಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿರುವ ನೂರಾರು ಸಂಘಟನೆಗಳು ಒಂದಾಗಿ ಜನತೆಯ ಪ್ರಣಾಳಿಕೆಯೊಂದನ್ನು ಪ್ರಕಟಿಸಿವೆ. ಈ ಎಲ್ಲಾ ಪ್ರಯತ್ನಗಳ ಫಲವೇನು ಎಂಬುದನ್ನು ಚುನಾವಣೆಯ ಫಲಿತಾಂಶಗಳೇ ಹೇಳಬೇಕು.
ಇತಿಹಾಸವನ್ನು ನೋಡಿದರೆ ಸಿನಿಕರ ಮಾತುಗಳನ್ನು ಸಮರ್ಥಿಸುವ ಉದಾಹರಣೆಗಳು ಸಿಗುವುದಿಲ್ಲ. ದೇಶದಲ್ಲೆಲ್ಲೂ ಇಲ್ಲದ ವಾಜಪೇಯಿ ಅಲೆ ಕರ್ನಾಟಕದಲ್ಲಿ ಇದ್ದಾಗಲೂ ಕರ್ನಾಟಕದ ಜನತೆ ಬಿಜೆಪಿಗೆ ಆಡಳಿತ ನಡೆಸುವಷ್ಟು ಸ್ಥಾನಗಳನ್ನು ನೀಡಲಿಲ್ಲ. ಹಾಗೆಯೇ ಇಡೀ ದೇಶ ಎನ್ಡಿಎಯ `ಪ್ರಕಾಶಮಾನ ಭಾರತ'ವನ್ನು ಕಂಡು ಕಂಗಾಲಾಗಿದ್ದರೂ ಕಾಂಗ್ರೆಸ್ ಮಾತ್ರ ಅಧಿಕಾರಕ್ಕೇರುವಷ್ಟು ಸ್ಥಾನಗಳನ್ನೂ ನೀಡಲಿಲ್ಲ. ಸಮ್ಮಿಶ್ರ ಸರಕಾರ ಅಗತ್ಯ ಎನ್ನುವ ವಾತಾವರಣವನ್ನು ಮತದಾರರು ಸೃಷ್ಟಿಸಿದರು. ಇದರಲ್ಲೊಂದು ಸ್ಪಷ್ಟ ಸಂದೇಶವಿತ್ತು. ನೀವ್ಯಾರೂ ನಮ್ಮ ಪ್ರಣಾಳಿಕೆಯನ್ನು ಗಮನಿಸಲಿಲ್ಲ ಎಂಬುದೇ ಆ ಸಂದೇಶ.
ಬ್ಲಾಗುಗಳಲ್ಲಿ ಬಡಬಡಿಸುವವರಿಗೂ ಪತ್ರಿಕೆಗಳಲ್ಲಿ ಕರೆ ನೀಡುವವರಿಗೂ ಟಿ.ವಿ.ಸ್ಟುಡಿಯೋಗಳಲ್ಲಿ ಕುಳಿತು ಜನರ ನಾಡಿ ಮಿಡಿತವನ್ನು ಅಳೆಯುವವರಿಗೂ ಇದು ಅರ್ಥವಾಗಬೇಕಾಗಿದೆ. ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಮೊದಲೇ ತನ್ನ ಆಯ್ಕೆಯನ್ನು ಖಚಿತ ಪಡಿಸಿಕೊಂಡಿರುವ ಭಾರತೀಯ ಮತದಾರ ವಿಶ್ಲೇಷಕರ ಲೆಕ್ಕಾಚಾರಗಳನ್ನು ತಪ್ಪಿಸಬೇಕು ಎಂಬುದನ್ನೂ ನೆನಪಿನಲ್ಲಿಟ್ಟುಕೊಂಡಿರುತ್ತಾನೆ.





ಉ: ಪ್ರಾಯೋಗಿಕ ನಿಲುವೆಂಬ ಭ್ರಷ್ಟರ ಸಮರ್ಥನೆ
ನೀವೂ ಎಲ್ಲರಂತೆ ಸಿನಿಕರಾಗದೆ ಒಂದು ಆಶಾಭಾವನೆಯನ್ನ ವ್ಯಕ್ತಪಡಿಸಿದ್ದಕ್ಕೆ ನನ್ನ ಧನ್ಯವಾದ.
ಉ: ಪ್ರಾಯೋಗಿಕ ನಿಲುವೆಂಬ ಭ್ರಷ್ಟರ ಸಮರ್ಥನೆ
I am reading all the articles on Politics and Curruption, I beleive that most our intellectual population is cynicle . I was reading Nagati halli and Ravi Belagere, all these writers made movies, made money and are still catering to the unsatisfied, grouchy,cynicle middle class population who do not have the power to speak or to change the system.
I feel strongly that when you write about the "system" so passinately, you are also responsible to make it better and I am so happy to read these articles and about Mr Ravi Reddy who also sounded damn cynicle on U TUBE..:)
ANYWAYS hope Sampada does good , I see that many youngsters are rooting for change it seems like the Vevekananda has inspired a whole lot of you.
Nice.
Nivedita Kumar
New York
ಉ: ಪ್ರಾಯೋಗಿಕ ನಿಲುವೆಂಬ ಭ್ರಷ್ಟರ ಸಮರ್ಥನೆ
ಪ್ರಿಯ ಇಸ್ಮಾಯಿಲ್,
ಈ ಬರಹವನ್ನು ಓದುತ್ತಿದ್ದಂತೆ ಬಡಕಲು ರೈತನೊಬ್ಬ ಬಿರುಕುಬಿಟ್ಟ ಹೊಲದಲ್ಲಿ ನಿಂತು ಆಕಾಶದೆಡೆಗೆ ನೋಡುತ್ತಿರುವ ಚಿತ್ರ ನನ್ನ ಮನಸ್ಸಿಗೆ ಬಂತು. ಆ ನೋಟದಲ್ಲಿ ದೇವರು ಇಂದಲ್ಲ ನಾಳೆ ಮಳೆ ಕೊಟ್ಟೇಕೊಡುತ್ತಾನೆ ಎಂಬ ಭರವಸೆಯೋ, ಮಳೆ ಬಂದಿಲ್ಲವೆಂಬ ಸಿಟ್ಟೋ, ಹತಾಶೆಯೋ ಏನು ಬೇಕಾದರೂ ಇರಬಹುದು. ಆದರೆ ಸುಮ್ಮನೆ ಆಶಾವಾದಿಯಾದವನೊಬ್ಬನಿಗೆ ಅದು ಪ್ರಾರ್ಥನೆಯಂತೆ, ನಿರೀಕ್ಷೆಯಂತೆ, ಭರವಸೆಯಂತೆ ಹೇಗೆ ಬೇಕಾದರೂ ಕಾಣಬಹುದು. ಇದು ನೀವು ಎತ್ತಿರುವ ಕೆಲವು ವಿಚಾರಗಳಿಗೂ ಅನ್ವಯವಾಗುತ್ತದೆ. ನೀವು ಚರ್ಚಿಸಿರುವ ಕೆಲವು ವಿಷಯಗಳಿಗೆ ಒಪ್ಪಿಗೆ ಸೂಚಿಸುತ್ತಾ ಇನ್ನು ಕೆಲವಕ್ಕೆ ನನ್ನ ತಕರಾರನ್ನು ದಾಖಲಿಸಬೇಕಿದೆ. ಸಿನಿಕನೆನ್ನಿಸಿಕೊಳ್ಳುವ ಅಪಾಯದ ಅರಿವಿದ್ದೂ ಕೆಲಮಾತುಗಳನ್ನಿಲ್ಲಿ ಹೇಳುತ್ತಿದ್ದೇನೆ.
‘ಯಾರು ಬಂದರೇನು ಎಲ್ಲರೂ ಭ್ರಷ್ಟರೇ’ ಎಂಬ ಜನಸಾಮಾನ್ಯರ (ಭೌದ್ಧಿಕ ಜಗತ್ತಿನಲ್ಲಿರುವವರ ಬಗ್ಗೆ ಗೊತ್ತಿಲ್ಲ) ಮಾತುಗಳು ಕೇವಲ ಸಿನಿಕತನದ್ದು ಎಂದು ನನಗೆ ಅನ್ನಿಸುವುದಿಲ್ಲ. ವರ್ಷಾನುಗಟ್ಟಲೇ ರಾಜಕೀಯದ ಹೊಲಸನ್ನು ನೋಡಿ, ರೋಸಿಹೋಗಿ, ನಿತ್ಯದ ಬದುಕಿನಲ್ಲಿ ಹಲವಾರು ತೊಂದರೆ ಅನುಭವಿಸಿ ಈ ಮಾತುಗಳನ್ನು ಆಡುವವರೇ ಹೆಚ್ಚು. ಏಕೆಂದರೆ ನಮ್ಮ ಪ್ರಜಾಪ್ರಭುತ್ವ ನಮಗೆ ಕೊಟ್ಟಿರುವ ಅಧಿಕಾರ (ಪವಿತ್ರ ಹಕ್ಕು?!) ಕೇವಲ ಓಟುಮಾಡುವುದು. ಚುನಾವಣೆಯ ನಂತರ (ಮತ್ತೊಂದು ಚುನಾವಣೆ ಬರುವವರೆಗೂ) ಇನ್ನೇನೂ ಮಾಡಲಾಗದೇ ರಾಜಕೀಯದ ಹೊಲಸಾಟಗಳನ್ನು ನೋಡುತ್ತಾ ಕೂರುವುದಷ್ಟೇ ಕೆಲಸ. ಯಾರು ಪಕ್ಷಾಂತರ ಮಾಡಿದರೇನು, ಅಪವಿತ್ರ ಮೈತ್ರಿಮಾಡಿಕೊಂಡರೇನು, ಯಾರು ಯಾವ ಸಿದ್ಧಾಂತ ಬಿಟ್ಟರೇನು, ಬಡಪಾಯಿ ಮತದಾರ ಏನನ್ನೂ ಮಾಡುವಹಾಗಿಲ್ಲ. ಇನ್ನೊಂದು ಚುನಾವಣೆ ಬರುವವರೆಗೂ ತಾಳ್ಮೆಯಿಂದ ಕಾದಿದ್ದು ಮತ್ತೆ ತನ್ನ ‘ಪವಿತ್ರ ಹಕ್ಕ’ನ್ನು ಚಲಾಯಿಸಬೇಕು ಅದೂ ಒಬ್ಬರಿಗಿಂತ ಒಬ್ಬರು ಭ್ರಷ್ಟರೇ ಕಣದಲ್ಲಿರುವಾಗ. ಮತಹಾಕಿ (ಇದ್ಯಾಕೋ ‘ದೇವರ ಮೇಲೆ ಭಾರ ಹಾಕಿ’ ಎಂದು ಹೇಳಿದ ಹಾಗಿದೆ!) ಮುಂದಿನ ನಾಟಕ ನೋಡಲು ಸಿದ್ಧವಾಗಬೇಕು. ಸೂಕ್ಷ್ಮರಾದ ಕೆಲವರು ಚುನಾವಣೆಯನ್ನೇ ತಿರಸ್ಕರಿಸಿ ಮನೆಯಲ್ಲಿ ಕೂತರೆ ಬಿಸಿರಕ್ತದವರು ಬಂದೂಕು ಹಿಡಿದು ಕ್ರಾಂತಿಮಾಡಹೊರಟವರನ್ನು ಸೇರಿಕೊಂಡ ಉದಾಹರಣೆಗಳು ನಮ್ಮ ಮುಂದಿವೆ.
ವಸ್ತುಸ್ಥಿತಿ ಹೀಗಿರುವಾಗ ಪತ್ರಿಕೆಗಳ ವಾಚಕರವಾಣಿಗೆ ಪತ್ರ ಬರೆದು ಸುಮ್ಮನಾಗುವ ಅಸಹಾಯಕತೆಗಿಂತ ನೀವು ಉದಾಹರಿಸಿರುವ ಜನತಾ ಪ್ರಣಾಳಿಕೆಯ ಪ್ರಕಟಣೆ ಸ್ವಲ್ಪಮಟ್ಟಿಗೆ ಒಳ್ಳೆಯ ಬೆಳವಣಿಗೆಯೇ ಇದ್ದೀತು. ಈ ಸಂದರ್ಭದಲ್ಲಿ ಮಾನ್ಯ ಅನಂತಮೂರ್ತಿಯವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸಿ ಸೋತದ್ದು ಮತ್ತೆ ನೆನಪಾಗುತ್ತಿದೆ. ನನ್ನ ದೃಷ್ಟಿಯಲ್ಲಿ ಸದ್ಯದ ವ್ಯವಸ್ಥೆಯ ಚೌಕಟ್ಟಿನೊಳಗೇ ಬದಲಾವಣೆ ತರುವಂತಹ ಕೆಲಸ ಮಾಡುವ ಬದಲು radical ಆದ ಪರ್ಯಾಯಗಳ ಕಡೆಗೆ ಗಮನ ಹರಿಸುವುದು ಹೆಚ್ಚು ಅಪೇಕ್ಷಣೀಯ. ಮತ್ತು ಚರ್ಚೆಗಳಿಂದ ಇದು ಸಾಧ್ಯ. ಈಗ ತುರ್ತಾಗಿ ಆಗಬೇಕಾದದ್ದು ಈ ಪಕ್ಷ ರಾಜಕಾರಣ, ಚುನಾವಣಾ ನಾಟಕ ಇತ್ಯಾದಿಗಳಿಂದ ಹೊರಬರುವ ಮಾರ್ಗಗಳ ಅನ್ವೇಷಣೆ, ಪ್ರಜಾಪ್ರಭುತ್ವದ ಮರುಹುಟ್ಟಿನ ಬಗೆಗಿನ ಚಿಂತನೆ, ಜನಾಭಿಪ್ರಾಯಕ್ಕೆ ಅನುವುಮಾಡಿಕೊಡಬಹುದಾದ ವ್ಯಾಪಕ ಚರ್ಚೆ.
ಈ ಹಿನ್ನೆಲೆಯಲ್ಲಿ ಮತಹಾಕದಿರುವವರನ್ನು ಅಥವಾ ಈ ‘ಚುನಾವಣಾ ಕೇಂದ್ರಿತ ಪ್ರಜಾಪ್ರಭುತ್ವ ವ್ಯವಸ್ಥೆ’ಯಿಂದ ದೂರವಿರಲು ಬಯಸುವವರನ್ನು ಸಾರಾಸಗಟಾಗಿ ಸಿನಿಕರೆಂದು ತಿರಸ್ಕರಿಸಲು ನನಗೆ ಮನಸ್ಸು ಬರುತ್ತಿಲ್ಲ. ಅದೂ ಸ್ವಾತಂತ್ರ್ಯ ಪಡೆದು ಅರವತ್ತು ಚಿಲ್ಲರೆ ವರ್ಷಗಳ ‘ಪ್ರಜಾಪ್ರಭುತ್ವ’ವನ್ನು ಅನುಭವಿಸಿದ ನಂತರ.
ಚುನಾವಣೆಗಳಿಂದ ದೂರವಿರುವ ಆದರೆ ತಮಗೆ ಸಾಧ್ಯವಾದ ರೀತಿಯಲ್ಲಿ NGO ಗಳಲ್ಲಿ, ಸ್ವಯಂಸೇವಾ ಸಂಸ್ಥೆಗಳಲ್ಲಿ ತೊಡಗಿರುವವರನ್ನು ಗಮನಿಸಿದ್ದೇನೆ. ಹೇಗೋ ಸರ್ಕಸ್ ಮಾಡಿ ಆದಷ್ಟೂ ಕಡಿಮೆ ತೆರಿಗೆ ಕಟ್ಟಿ, ಹಾಗೆ ಉಳಿದ ಹಣಕ್ಕೆ ಇನ್ನಷ್ಟು ಸೇರಿಸಿ ಇಂತಹ ಸಂಸ್ಥೆಗಳಿಗೆ ದೇಣಿಗೆ ಕೊಡುವವರನ್ನೂ ನೋಡಿದ್ದೇನೆ. ನನ್ನ ದೃಷ್ಟಿಯಲ್ಲಿ ಇವೆಲ್ಲ ಸರ್ಕಾರಗಳ ಮೇಲಿನ ನಂಬಿಕೆ ಕಳೆದುಕೊಂಡು ಆದರೆ ಅಸಹಾಯಕರಂತೆ ಮತಹಾಕಿ ಸುಮ್ಮನೆ ಕೂತಿರಲಾರದವರು ಕಂಡುಕೊಂಡ ಪರ್ಯಾಯಗಳು. ಇವೆಲ್ಲ ಅದ್ಭುತ ಪರ್ಯಾಯಗಳು ಎಂದೇನೂ ಹೇಳುತ್ತಿಲ್ಲ. ಆದರೆ ವೈಯಕ್ತಿಕವಾಗಿ ಕೆಲವರು ಕಂಡುಕೊಂಡ ಮಾರ್ಗಗಳು ಅಷ್ಟೇ. ಸಮುದಾಯವೊಂದು ಒಟ್ಟಾಗಿ ಚಿಂತನೆ ನಡೆಸಿದರೆ ಇಂತಹ ವೈಯಕ್ತಿಕ ಪರ್ಯಾಯ ಮಾರ್ಗಗಳ ಅಗತ್ಯವಿಲ್ಲದಂತಹ ವ್ಯವಸ್ಥೆಯ ಕಡೆಗೆ ನಿಧಾನವಾಗಿಯಾದರೂ ನಡೆಯಲು ಸಾಧ್ಯ.
ಇತ್ತೀಚೆಗೆ ಗೆಳೆಯರೊಂದಿಗೆ ಚರ್ಚಿಸುತ್ತಿದ್ದಾಗ ಒಂದು crazy ಎನ್ನಬಹುದಾದ idea ಹೊಳೆಯಿತು (ಅಂಥಾ radical ಆದದ್ದೇನೂ ಅಲ್ಲ, ಸದ್ಯಕ್ಕೆ ಇರುವ ವ್ಯವಸ್ಥೆಗೇ ತೇಪೆ ಹಾಕುವಂಥದ್ದು). ಈಗಿನ ಚುನಾವಣೆಯಲ್ಲಿರುವ anonymous ಆಗಿ ಮತ ಚಲಾಯಿಸುವ ವ್ಯವಸ್ಥೆಗೆ ಬದಲಾಗಿ ಪ್ರತಿಯೊಬ್ಬ ಮತದಾರ ಯಾರಿಗೆ ಮತ ಹಾಕಿದ್ದಾನೆ/ಳೆ ಎಂಬುದನ್ನು ದಾಖಲಿಸಿ ಇಡುವುದು. ಈ ದಾಖಲೆ ಕೇವಲ ಚುನಾವಣಾ ಇಲಾಖೆಗೆ ಮಾತ್ರ ಲಭ್ಯವಾಗಬೇಕು, ಅಭ್ಯರ್ಥಿಗಾಗಲೀ ಇತರೆ ಮತದಾರರಿಗಾಗಲೀ ಅಲ್ಲ. ನಂತರ ಯಾವುದೇ ಸಂದರ್ಭದಲ್ಲಿ ಮತದಾರ ಚುನಾವಣಾ ಇಲಾಖೆಗೆ ಹೋಗಿ ತನ್ನ ಮತವನ್ನು ವಾಪಸು ಪಡೆಯಬಹುದು ಅಥವಾ ಇನ್ನೊಬ್ಬ ಅಭ್ಯರ್ಥಿಗೆ ವರ್ಗಾಯಿಸಬಹುದು. ಪ್ರತಿ ಅಭ್ಯರ್ಥಿಯ ಒಟ್ಟು ಮತಗಳನ್ನು ಬೇಕಾದಾಗ ಪರಿಶೀಲಿಸುವ ವ್ಯವಸ್ಥೆ ಇರಬೇಕು. ಇಂದಿನ ತಾಂತ್ರಿಕ ಪ್ರಗತಿಯ ದಿನಗಳಲ್ಲಿ ಇದೇನೂ ಕಷ್ಟವಲ್ಲ – ಜನಸಂಖ್ಯೆ, ಹವಾಮಾನ ಇತ್ಯಾದಿ ಮಾಹಿತಿಗಳಂತೆ ಪ್ರತಿ ಕ್ಷೇತ್ರದ ಅಭ್ಯರ್ಥಿಯ ಸದ್ಯದ ಮತಗಳ ಸಂಖ್ಯೆಯನ್ನೂ ನಿರಂತರವಾಗಿ (ಉದಾಹರಣೆಗೆ ಇಂಟರ್ನೆಟ್ಟಿನಲ್ಲಿ) ಪ್ರದರ್ಶಿಸುತ್ತಿರಬಹುದು. ಅಭ್ಯರ್ಥಿಯೊಬ್ಬನು ಗೆದ್ದು ಅಧಿಕಾರದಲ್ಲಿದ್ದು ಕೆಲಸಮಯದ ನಂತರ ಅವನ ಒಟ್ಟು ಮತಗಳ ಸಂಖ್ಯೆ ಅವನೆದುರು ಈ ಹಿಂದೆ ಸೋತ ಅಭ್ಯರ್ಥಿಗಿಂತ ಕಡಿಮೆಯಾದ ಕೂಡಲೆ ಅವನನ್ನು ಅಧಿಕಾರದಿಂದ ಕೆಳಗಿಳಿಸುವುದು ಹಾಗು ಅವನ ಎದುರಾಳಿಯನ್ನು ಗೆದ್ದ ಅಭ್ಯರ್ಥಿಯೆಂದು ಒಪ್ಪಿಕೊಳ್ಳುವುದು. ಈಗ ಮತದಾರನಿಗೆ ನಿಜವಾಗಿಯೂ ‘ಒಂದು ಬಗೆಯ ಶಕ್ತಿ’ ದೊರಕುತ್ತದೆ ಅಷ್ಟೇ ಅಲ್ಲ ಬಾಯಿಗೆ ಬಂದಂತೆ ಮಾತನಾಡುತ್ತಾ ಮನಸ್ಸಿಗೆ ಕಂಡಂತೆ ವರ್ತಿಸುವ ಮುತ್ಸದ್ಧಿಗಳು ಸ್ವಲ್ಪ ಚುರುಕಾಗುತ್ತಾರೆ.
ಇಂತಹ ideaಗಳು ಪರಿಪೂರ್ಣ ಎಂದಾಗಲೀ ಇದೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂಬ ಭ್ರಮೆಯಾಗಲೀ ನನಗಿಲ್ಲ. ಆದರೆ ಹೊಸಮಾರ್ಗಗಳ ಅನ್ವೇಷಣೆಗೆ ಇಂತಹ ಪ್ರಯತ್ನಗಳು ಕೈಮರವಾಗಬಹುದೆಂಬ ಆಸೆಯಂತೂ ಖಂಡಿತ ಇದೆ. ಇಷ್ಟೇ ಮುಖ್ಯವಾಗಿ ಗಮನಿಸಬೇಕಾದದ್ದು ಮತಹಾಕದಿರುವವರ, ಹತಾಶರಾಗಿ ಮಾತನಾಡುವವರ ಮನಸ್ಥಿತಿಯಲ್ಲೂ ಒಂದು ಸ್ಪಷ್ಟ ಸಂದೇಶವಿದೆ ಎಂಬುದನ್ನು – that this is high time to think of & work towards alternatives.
ಸದ್ಯಕ್ಕೆ ರವಿ ಕೃಷ್ಣಾ ರೆಡ್ಡಿಯವರಿಗೆ, ಮಹಿಮಾ ಪಟೇಲರಿಗೆ ಬೆಂಬಲ ಸೂಚಿಸುತ್ತ ನನ್ನ ಸ್ವಲ್ಪ ಒರಟಾದ ಪ್ರತಿಕ್ರಿಯೆಯನ್ನು ಮುಗಿಸುತ್ತೇನೆ. ಮನ್ನಿಸಿ.
ವಿಶ್ವಾಸದಿಂದ,
- ಪ್ರಶಾಂತ್ ಪಂಡಿತ್
ರಾಜಕೀಯ ಪ್ರಜ್ಞೆ
ನೀವು ಎತ್ತಿರುವ ಪ್ರಶ್ನೆಗಳು ಮತ್ತು ಅಭಿಪ್ರಾಯಗಳು ಸರಿಯಾಗಿಯೇ ಇವೆ. ನಾವು ಅನುಸರಿಸುತ್ತಿರುವ first past the post ಚುನಾವಣಾ ವ್ಯವಸ್ಥೆಯ ಮಿತಿಗಳಲ್ಲಿ ಬಹಳ ಮುಖ್ಯವಾದುದು ಗೆಲ್ಲುವವನನ್ನು ನಿಜಕ್ಕೂ ಪ್ರಜೆಗಳು ಆರಿಸಿದ್ದಾರೆಯೇ ಎಂಬುದು? ಎಷ್ಟೋ ಸಂದರ್ಭದಲ್ಲಿ ಗೆದ್ದವನ ವಿರೋಧಿಗಳಿಗೆ ಬಿದ್ದ ಮತಗಳನ್ನು ಒಟ್ಟು ಗೂಡಿಸಿದರೆ ಅವು ಗೆದ್ದವನಿಗೆ ದೊರತೆ ಮತಕ್ಕಿಂತ ಹೆಚ್ಚಾಗಿರುತ್ತದೆ. ಆದರೆ first past the post ವ್ಯವಸ್ಥೆಯಲ್ಲಿ ಹೀಗೊಂದು ಲೆಕ್ಕಾಚಾರಕ್ಕೆ ಅವಕಾಶವಿಲ್ಲ.
ನೇಪಾಳದಲ್ಲಿ ಸಂವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಗಳನ್ನು ನಮ್ಮ ಸಂವಿಧಾನ ಸಭೆಗೆ ನಡೆದ ಚುನಾವಣೆಗಳಿಗೆ ಹೋಲಿಸಿ ನೋಡಿದರೆ ನಾವಿಂದು ಅನುಭವಿಸುತ್ತಿರುವ ಸಮಸ್ಯೆಯ ಮೂಲ ಎಲ್ಲಿದೆ ಎಂದು ತಿಳಿಯುತ್ತದೆ. ನಮ್ಮಲ್ಲಿ ಸಂವಿಧಾನ ಸಭೆಗೆ ಹೀಗೆಯೇ ಒಂದು ಚುನಾವಣೆ ನಡೆಯಿತು ಎಂಬುದು ನಿಜವಾದರೂ ಇಂದು ನೇಪಾಳದಲ್ಲಿ ಇರುವ ಪಾಲ್ಗೊಳ್ಳುವಿಕೆಯ ಪ್ರಮಾಣಕ್ಕೂ ನಮ್ಮವರ ಪಾಲ್ಗೊಳ್ಳುವಿಕೆಯ ಮಾದರಿಗೂ ಅಜಗಜಾಂತರವಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ proportional representation ಎಂಬುದು ನಿಜ ಅರ್ಥದಲ್ಲಿ ಇರಲಿಲ್ಲ. ಇದು ಹಿಂದಿನ ರಾಜ ಪ್ರಭುತ್ವಗಳ ಕಾಲದಲ್ಲಿ ಇದ್ದ ಜನಪ್ರತಿನಿಧಿ ಸಭೆಗಳಂತೆ ಇತ್ತು.
ಅದೇ ಸ್ಥಿತಿ ಈಗಲೂ ಮುಂದುವರಿದಿದೆ. ಅದೇ ರಾಜಕಾರಣಿಗಳು ಎಂದು ನಾವು ಹೇಳುವಾಗ ಒಂದು ವಿಷಯವನ್ನು ಮರೆತುಬಿಡುತ್ತಿದ್ದೇವೆ ಎಂದು ನನಗನ್ನಿಸುತ್ತದೆ. ಈ 'ಅದೇ' ಜನರನ್ನು ಆರಿಸಿದ್ದೂ ನಾವೇ. ಆಡಳಿತ ಪ್ರಕ್ರಿಯೆಯಲ್ಲಿ ನಮ್ಮ ಭಾಗವಹಿಸುವಿಕೆ ಕಡಿಮೆಯಾದುದರಿಂದ ಈ ಸಮಸ್ಯೆ ಎದುರಾಗುತ್ತಿದೆ. ಈಗ ಅಧಿಕಾರಶಾಹಿಯ ಭ್ರಷ್ಟಾಚಾರವನ್ನು ಎಲ್ಲರೂ ವಿರೋಧಿಸುತ್ತಾರೆ. ಆದರೆ ಯಾರೊಬ್ಬನೂ ತಾನು ಲಂಚ ಕೊಡುವುದಿಲ್ಲ ಎಂದು ತೀರ್ಮಾನಿಸಿ ಅದಕ್ಕೆ ಬದ್ಧನಾಗಿರುವುದಿಲ್ಲ. ನಾವು ಮತ ಹಾಕುವುದನ್ನು ಹೊರತು ಪಡಿಸಿ ಅನೇಕ ಕೆಲಸಗಳನ್ನು ಮಾಡಬಹುದಾದ ಕೆಲಸ ಇದು. ಇಂಥ ಇನ್ನೂ ಅನೇಕ ಕೆಲಸಗಳನ್ನು ಪಟ್ಟಿ ಮಾಡಬಹುದು.
ರಸ್ತೆ ಸರಿ ಇಲ್ಲದಿದ್ದರೆ ನಾವು ಗೊಣಗುತ್ತಾ ಹೋಗುತ್ತೇವೆಯೇ ಹೊರತು ರಸ್ತೆ ಸರಿ ಇಲ್ಲದಿರುವುದನ್ನು ಒಂದು ರಾಜಕೀಯ ಪ್ರಶ್ನೆಯಾಗಿಸುವ ಉತ್ಸಾಹ ವಿರೋಧ ಪಕ್ಷಗಳಿಗಾದರೂ ಹುಟ್ಟುವಂತೆ ಮಾಡುವಲ್ಲಿ ಸೋಲುತ್ತಿದ್ದೇವೆ. ನಮ್ಮ ರಾಜಕೀಯ ಪ್ರಜ್ಞೆಯ ಅಭಿವ್ಯಕ್ತಿಯ ಬಹಳ subtle ಆಗಿರುವುದರ ಸಮಸ್ಯೆ ಇದಾಗಿರಬಹುದೇ?
ಇಸ್ಮಾಯಿಲ್
ನನ್ನ ಬ್ಲಾಗ್: http://ismail.in
ಉ: ಪ್ರಾಯೋಗಿಕ ನಿಲುವೆಂಬ ಭ್ರಷ್ಟರ ಸಮರ್ಥನೆ
ನಿಜ, ವ್ಯವಸ್ಥೆಯದ್ದೊಂದು ಕಥೆಯಾದರೆ ಭಾಗವಹಿಸುವಿಕೆಯದ್ದು ಇನ್ನೊಂದು ಕಥೆ. ಇಂದಿನ ಜೀವನಕ್ರಮ, value system, ಇತ್ಯಾದಿಗಳನ್ನು ಗಮನದಲ್ಲಿಟ್ಟು ಯೋಚಿಸಿದರೆ ಭಾಗವಹಿಸುವಿಕೆಯ ಪ್ರಕ್ರಿಯೆಯಲ್ಲಿ motivationನ ಪಾತ್ರ ಪ್ರಮುಖವಾಗಿ ಕಾಣುತ್ತದೆ. ಇಂದಿನ ಪ್ರಜಾವಾಣಿಯಲ್ಲಿ ಮುಝಫರ್ ಅಸಾದಿಯವರು ವೆನೆಜುವೆಲಾದ ಉದಾಹರಣೆ ಕೊಡುತ್ತಾ ಚರ್ಚಿಸಿರುವ ಕೆಲವು ವಿಷಯಗಳು ಗಮನಾರ್ಹವಾಗಿವೆ (http://www.prajavani.net/Content/Apr302008/editpage2008042977825.asp)
- ಪ್ರಶಾಂತ್ ಪಂಡಿತ್
Post new comment