ವರದಿ


ಸಾವಿರಾರು ವರ್ಷ ಬದುಕುಳಿಯಲೇ ಬೇಕಾಗಿದ್ದ ಜೀವ ವೀಣಾಧರಿಯವರದ್ದು. ಎಚ್ಐವಿ ಬಾಧಿತರೆಲ್ಲರಲ್ಲೂ ಜೀವನೋತ್ಸಾಹವನ್ನು ಪುಟಿಯುವಂತೆ ಮಾಡಿವರೀಕೆ. ನಾಲ್ಕು ವರ್ಷಗಳ ಹಿಂದೆ ಪರೀಕ್ಷೆಯೊಂದಕ್ಕಾಗಿ ಮಂಗಳೂರಿನಲ್ಲಿದ್ದಾಗ ವೀಣಾರ ಪರಿಚಯವಾಯಿತು. ನಾನು ಉಳಿದುಕೊಂಡಿದ್ದ ಗೆಳೆಯರ ಮನೆಯ ಸಮೀಪವೇ ವೀಣಾ ಅವರ ಮನೆ ಮತ್ತು ಕಚೇರಿ. ನನ್ನ ಮಂಗಳೂರಿನ ಗೆಳೆಯರೆಲ್ಲರಿಗೂ ಪರಿಚಿತರೂ ಹತ್ತಿರದವರೂ ಆಗಿದ್ದ ವೀಣಾ ಅವರ ಬದುಕಿನ ಕಥೆ ಕೇಳಿ ನನಗೂ ಕುತೂಹಲ ಉಂಟಾಯಿತು. ಮೆಂಡೋನ್ಸಾ ಕಾಂಪೌಂಡ್ ನಲ್ಲಿದ್ದ ನಮ್ಮ ಮನೆಯಲ್ಲಿ ಕುಳಿತು ಆ ಸಂಜೆ ವೀಣಾ ಸುಮಾರು ಎರಡು ಗಂಟೆಗಳ ಕಾಲ ಮಾತನಾಡಿದ್ದರು. ಅದಷ್ಟನ್ನೂ ನಾನು ಧ್ವನಿಮುದ್ರಿಸಿದ್ದೆ. ಅದರ ಆಯ್ದ ಭಾಗಗಳನ್ನು ಒಂದು ಲೇಖನವಾಗಿಸಿ ಉದಯವಾಣಿಯ ಮಹಿಳಾ ಸಂಪದ ಪುರವಣಿಯಲ್ಲಿ ಪ್ರಕಟಿಸಿದ್ದೆ. ವೀಣಾರ ದಿಟ್ಟ ನಿಲುವುಗಳನ್ನು ಹೊರಜಗತ್ತಿಗೆ ಪರಿಚಯಿಸಿದ ಮೊದಲ ಬರೆಹ ಇದು. ಆಮೇಲೆ 'ತರಂಗ' ವಾರಪತ್ರಿಕೆ ಇವರ ಬದುಕಿನ ಕತೆಯನ್ನು ಮುಖಪುಟ ಲೇಖನವಾಗಿ ಪ್ರಕಟಿಸಿತು. ಹಾಯ್ ಬೆಂಗಳೂರಿನ ರವಿ ಬೆಳಗರೆಯವರಂತೂ ವೀಣಾರ ಆಂದೋಲನಕ್ಕೆ ಸಕಲ ರೀತಿಯ ನೆರವುಗಳನ್ನು ನೀಡಿದರು. ಅಷ್ಟೇ ವೀಣಾರನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಂಡರು. ಎಚ್ ಐವಿಯೊಂದಿಗೆ ನೇರ ಸಂಬಂಧವೇ ಇಲ್ಲದ ಮೆದುಳಿನ ರಕ್ತ ಸ್ರಾವದಿಂದ ವೀಣಾ ತೀರಿಕೊಂಡರು. ಅವರ ನೆನಪಿಗಾಗಿ ಈ ಹಳೆಯ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.
 read more »

Syndicate content